Monday, April 18, 2011

ಶ್ರೀ ಮಹಾತ್ಮ ಗಾಂಧಿ !

ಬಲಗೈಯಲ್ಲಿ ಗೀತೆ
ಎಡಗೈಯಲ್ಲಿ ರಾಠೆ
ಹಿಡಿದವರ್ಯಾರು ಗೊತ್ತೆ
ಅವರೆ ನಮ್ಮ ಗಾಂಧಿ
ಶ್ರೀ ಮಹಾತ್ಮ ಗಾಂಧಿ

ಮಕ್ಕಳಿಗೆಲ್ಲಾ ತಾತ
ವಿಶ್ವಕ್ಕೆಲ್ಲ ಧಾತ
ಅಂತಹವರ್ಯಾರು ಗೊತ್ತೆ
ಅವರೆ ನಮ್ಮ ಗಾಂಧಿ
ಶ್ರೀ ಮಹಾತ್ಮ ಗಾಂಧಿ

ಕೈಯಲ್ಲೊಂದು ಕೋಲು
ಅವರಿಗಿಲ್ಲಾ ಸೋಲು
ಅಂತಹವರ್ಯಾರು ಗೊತ್ತೆ
ಅವರೆ ನಮ್ಮ ಗಾಂಧಿ
ಶ್ರೀ ಮಹಾತ್ಮ ಗಾಂಧಿ

ಇನ್ನೊಂದು ವಿಡಿಯೋ ಇಲ್ಲಿದೆ

Sunday, April 10, 2011

ಬೇಟೆಗಾರ !!



ಬೇಟೆಗಾರ ಬಂದ
ಬಿಲ್ಲು ಬಾಣ ತಂದ
ಕಾಡು ಹಂದಿ ಕೊಂದ
ಬೆಂದ ಹಂದಿ ತಿಂದ
ಹೊಟ್ಟೆ ನೋವು ಅಂದ
ಮರದ ಕೆಳಗೆ ಬಿದ್ದ
ಹುಲಿರಾಯ ಬಂದ
ಹೊಟ್ಟೆ ತುಂಬ  ತಿಂದ
ಹುಲಿರಾಯ ಬಂದ
ಹೊಟ್ಟೆ ತುಂಬ ತಿಂದ 

Thursday, April 07, 2011

ದಿನಚರಿ

ದಿನಚರಿ
ದಿನವು ಬೇಗ ಏಳಬೇಕು
ಎದ್ದು ಹಲ್ಲನುಜ್ಜಬೇಕು
ಉಜ್ಜಿ ಮುಖವ ತೊಳೆಯಬೇಕು
ದಿನವು ಸ್ನಾನ ಮಾಡ ಬೇಕು

ದೇವರಿಗೆ ನಮಸ್ಕರಿಸಿ
ತಿಂಡಿಯನ್ನು ತಿನ್ನಬೇಕು
ಗುರುವಿಗೆ ನಮಸ್ಕರಿಸಿ
ಶಾಲೆಯಲ್ಲಿ ಕಲಿಯಬೇಕು

Wednesday, April 06, 2011

ವಸಂತ ಬಂದ!!

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ !

ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ !

ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ !

ಬಂದ ವಸಂತ -ನಮ್ಮಾ ರಾಜ ವಸಂತ !!
-ಬಿ. ಎಂ.ಶ್ರೀ.
ಇದು ಬಿ.ಎಂ .ಶ್ರೀಕಂಠಯ್ಯನವರು ಅನುವಾದಿಸಿರುವ 'ಇಂಗ್ಲಿಷ್ ಗೀತೆಗಳು’  ಕವನ ಸಂಕಲನದ್ದು. ಇದರ ಮೂಲ ಪದ್ಯ Thomas Nashe ರವರ `Spring, the Sweet Spring’
 

Monday, April 04, 2011

ಯುಗಾದಿ ಹಬ್ಬ!

ಈ ವರ್ಷ ಹಬ್ಬಕ್ಕೆ ನಮ್ಮ ಮನೆಯ ಬಾಗಿಲುಗಳಿಗೆ ಮಾವಿನ ಬದಲು ಮಾಗ್ನೋಲಿಯಾ ಎಲೆಗಳ ತೋರಣ.
 ಯುಗಾದಿ ಹಬ್ಬಕ್ಕೆಂದು ಸ್ನೇಹಿತರೊಬ್ಬರು ತಮ್ಮ ಊರಿನಿಂದ ಬೇವಿನ ಎಲೆಗಳನ್ನು ಪೋಸ್ಟ್ ನಲ್ಲಿ ನಮಗಾಗಿ ಕಳುಹಿಸುತ್ತಿದ್ದರು. ಆದ್ರೆ ಈ ಸರ್ತಿ ಅದೂ ಇಲ್ಲವಾಯ್ತು, ಅವರ ಮನೆಯ ಹತ್ತಿರ ಮರವನ್ನು ಕಡಿದು ಹಾಕಿದರಂತೆ:( ಸರಿ, ಬೇವಿನ ಬದಲಿಗೆ ಹಾಗಲಕಾಯಿ ತುರಿಯನ್ನು ಬೆಲ್ಲದ ಜೊತೆ ಬೆರೆಸಿ "ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕ ದಳ ಭಕ್ಷಣಂ " ಅಂತ ಹೇಳಿಕೊಂಡು ತಿಂದೆವು. ಈ ಬೇವು ಬೆಲ್ಲ ತಿನ್ನುವುದರಿಂದ "ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಸಂಪತ್ತು, ಎಲ್ಲ ಕೆಡಕುಗಳ ವಿನಾಶ" ಇವೆಲ್ಲ ಸಿಗುತ್ತೆ ಎಂದರ್ಥ.

ನಮ್ಮ ಹಬ್ಬದೂಟ.. ಇಷ್ಟೆಲ್ಲಾ ಇದ್ದರೂ ಹೋಳಿಗೆ ಇಲ್ಲವಲ್ಲಾ ಅನಿಸಿತು, ಬಾಳೆ ಎಲೆ ಇದ್ದಿದ್ದರೆ ಆಹಾ ....
 ಬೆಳಗ್ಗೆ ಹೊಸ್ತಿಲ ಬಳಿ ರಂಗೋಲಿ ಹಾಕುವಾಗ ಪುಟ್ಟಿ ತಾನೂ ಹಾಕುವುದಾಗಿ ಪುಡಿಯನ್ನು ಚೆಲ್ಲಾಡಿದ್ದಳು. ಸರಿ ಅದಕ್ಕೆ ಅಂತ ಸಂಜೆ ಅವಳಿಗೆ ಒಂದೆರೆಡು ರಂಗೋಲಿ ಬರೆದು ಬಣ್ಣ ತುಂಬಲು ಕೊಟ್ಟೆ.
 ಆದ್ರೆ ಅವಳು ತಾನೇ ರಂಗೋಲಿ ಬರೀಬೇಕು ಅಂತ ಇಷ್ಟಪಟ್ಟಳು. ಆಗಲಿ ಅಂತ ಚುಕ್ಕಿಗಳನ್ನು ಇಟ್ಟುಕೊಟ್ಟೆ, ನಾನು ಮಾಡಿದ್ದ ರಂಗೋಲಿಯನ್ನು ನೋಡಿಕೊಳ್ಳುತ್ತಾ ತಾನೂ ಮಾಡಿದಳು. ಭೇಷ್ ಪುಟ್ಟಿ ಅನಿಸಿತು:)